Sunday, October 4, 2015

ಕಾಯುವ ಮನಗಳು!!!!...

ಮಳೆಯಲಿ ನೆನೆಯಲು ಮನೆಗಳು...
ಪ್ರೀತಿಗೆ ಕಾಯುತಿವೆ
    ಕೆಲವು ಮನಗಳು...
ಮಳೆಯು ನಿಲ್ಲ ಬಹುದು..
ಮನೆಯು ಒಣಗ ಬಹುದು..
ಆದರೆ
ಸುರಿಯದ ಪ್ರೀತಿಯ ಮಳೆಗೆ
ಕೊಳವ ಮಾಡಿ ಹೃದಯವನ್ನ
ಜಾತಕ ಪಕ್ಷಿಯಂತೆ ಕಾಯಬಹುದೇ
    ನೊಂದ ಮನಗಳು...?
ಈ ನಡು ರಾತ್ರಿಯಲಿ
ನಭದ ನಕ್ಷತ್ರಗಳಷ್ಟು
ಕನಸು ಕಟ್ಟಿ, ಭರವಸೆಯ
ನಾಳೆಗಾಗಿ ರೆಪ್ಪೆ ಬಡಿಯ
ಬಹುದೇ ಕಣ್ಣುಗಳು..?
ನೊಂದ ಜೀವಗಳು...
ಹೀಗೆ ಯಾರೋ ಮತ್ತ್ಯಾರೋ
ಯೋಚನೆಯಲಿ ನಿಸ್ವಾರ್ಥದಿಂದ
ಕಾಯುವ ಹೃದಯಗಳಿಗೆ
ಹೇಳಬಹುದೆ..?
ನನದೊಂದು ನಮನ..
ಪ್ರೀತಿಗೆಂದು ಈ ಕವನ...
                        Kiran Atreya....

Tuesday, September 22, 2015

ಆಡಿದ ಮಾತಿಗೆ ಏಕೆ ಕೊರಗುವೆ....

ಗೆಳತಿ..
ಆಡಿದ ಮಾತಿಗೆ
ಏಕೆ ಕೊರಗುವೆ...
ಕೋಪದಲ್ಲಿ ಬಂದದಕ್ಕೆ
ಏಕೆ ಮರುಗುವೆ..
ಕೆಲವೊಮ್ಮೆ ನೇರವಾಗಿ
ಹೇಳುವುದು ಉಚಿತ..
ಧೀರ್ಘಕಾಲದ
ದ್ವೇಷ ಅನುಚಿತ..
ಆಡಿದ ಮಾತಿಂದ
ನಿನ್ನ ವ್ಯಕ್ತಿತ್ವಕ್ಕೆ
ಬಾರದು ಧಕ್ಕೆ..
ಅವಕಾಶವಾದಿಗಳು
ಎಲ್ಲದಕ್ಕೂ
ಹಾಕಬಹುದು ಕೊಕ್ಕೆ...
ಆಡಿದ ಮಾತಿಗೆ ವ್ಯಕ್ತಿತ್ವವನ್ನೆ
ಅಳೆಯುವುದು ಮೂರ್ಖತನ..
ಸಮಯ ಸಂದರ್ಭಕ್ಕೆ
ವರ್ತಿಸುವುದೇ ಜಾಣತನ...
ಪಶ್ಚಾತಾಪಕ್ಕೆ
ನಿನ್ನ ತಪ್ಪು ಏನೂ ಇಲ್ಲ...
ಮರುಕಕ್ಕೆ
ನಿನ್ನದು ತಪ್ಪೇಅಲ್ಲ....
      
               ಕಿರಣೋಕ್ತಿ....

ಪ್ರೇಮವೆಂದರೆ....

ಪ್ರೇಮವೆಂದರೆ..
ಸದಾ ಪ್ರೇಯಸಿಯದೆ ಧ್ಯಾನ...
ಮಾತೆ ಬರದ ಮೌನ..
ಮನಸಿನಾಲಯದಲಿ ಪ್ರೇಮ
ಚುಕ್ಕಿಯ ಆಟ..
ಹೃದಯಾಲಯದಲಿ ಅವಳ
ಬಡಿತದ ಓಟ..
ಚುಕ್ಕಿ ಎಣಿಸುತಿದೆ ನಮ್ಮ ಮೇಲೆ
ಚಂದ್ರನ ಪ್ರೇಮವೆಷ್ಟೆಂದು..
ಚಂದ್ರನು ಬೆಪ್ಪಾದ ನನ್ನ ಮೇಲೆ
ಇವರ ವ್ಯಾಮೋಹ ಎಷ್ಟೊಂದು..
ಚುಕ್ಕಿಚಂದ್ರಮರ ಆಟವ ನೋಡುತಿದೆ
ಪ್ರೇಮಿಗಳ ಹೃದಯ..
ಶಿವನ ಕೃಪೆಯ ಮಾಯೆಗೆ
ಎಲ್ಲವನ್ನು ಮರೆತಿದೆ
ಈ ಜಗದ ಹೃದಯ...
                 ಕಿರಣೋಕ್ತಿ....

ಗೆಳತಿ....

ನಿಜ ಹೇಳು ಗೆಳತಿ
ಯಾವ ರಸಿಕನ ಮನವ ತಣಿಸುವ
ಕಣ್ಣು ಕೋರೈಸುವ ರತ್ನ ನೀನು..
ಮುಷ್ಟಿ ಬಿಟ್ಟರೆ ಮನೆ ತುಂಬ
ಚೆಲ್ಲುವ ಮುತ್ತಿನ ಹನಿಯೇ ನೀನು...
ಕಾವ್ಯ ಕಲ್ಪಿಸುವ ನನ್ನ ಚಿತ್ತದ
ಪದಗಳನೆ ನಾಚಿಸುವ ಈ ಕವಿಯ
ಯಾವ ಜನ್ಮದ ಗೆಳತಿಯೇ ನೀನು...
ಸರಸತಿಯಿಂದ ಜನಿಸಿ, ಸೌಂದರ್ಯ
ಸೃಷ್ಟಿಸಿದ ದೇವ ಲೋಕದ ಮಾಯಗಾತಿಯೇ ನೀನು...
ನಿಜ ಹೇಳು ಗೆಳತಿ
ಯಾವ ರಸಿಕನ ಹೃದಯದಲ್ಲರಳಿದ
ಮಂದಾರ ಪುಷ್ಪದ
ಕೋಮಲಾಂಗಿಯು ನೀನು...
                            ಕಿರಣ್ ಆತ್ರೇಯ....

Sunday, September 20, 2015

ಸ್ಪೂರ್ತಿ....

ಗೆಳತಿ...
ನನ್ನ ಸ್ಫೂರ್ತಿ ಮಾತಿಗೆ
ನೀ ಏಕೆ ಕಾಯುವೆ.?
ಅನ್ಯರ ಪ್ರೋತ್ಸಾಹ ಎಷ್ಟು ದಿನ..?
ಅದು ಮಾತ್ರ ಅವರು ಇರುವಷ್ಟುದಿನ
ಸ್ವಯಂಬೆಳಗುವ
ಸೂರ್ಯ ಶಾಶ್ವತ...
ಕಿರಣವನ್ನ ಹೀರಿ
ಪ್ರತಿಫಲಿಸುವ ತುಂಬು
ಚಂದಿರನೆಂದೂ ಅಶಾಶ್ವತ..
ನೀನೇ ಕಂಡುಕೋ
ನಿನ್ನಲ್ಲಿನ ಸ್ಫೂರ್ತಿಯನ್ನ..
ನೀನೇ ಅಂಟಿಸು
ನಿನ್ನಲ್ಲಿನ ಜ್ಞಾನ ಜ್ಯೋತಿಯನ್ನ..
ಉರಿದು ಅನ್ಯರಿಗು ಚೇತನವಾಗಲಿ..
ತಮೋಭೀತಿ ಸುಟ್ಟು ಜಗವೇ
                    ಬೆಳಕಾಗಲಿ...
     
                     ಕಿರಣೋಕ್ತಿ....

ಒಂದು ದಿನ....

ನನ್ನ ignitor bykeನ ಮೇಲೇರಿ
 ಬೆಳೆಸಿದಾಗ ಎತ್ತಲೋ ಸವಾರಿ..

Bus ಗೆ ಕಾಯುತ್ತ ನಿಂತ ಚೆಲುವೆಯ
 ಬೆಡಗು ಬಿನ್ನಾಣಕ್ಕೆ ಅನುರಾಗವರಳಿ
 ಮನಸ್ಸು ಸೋತಿತೋ..
ಯಾವ ಸೆಳೆತವೋ,
ಯಾವ ಮಾಯೆಯೋ. 
ನನ್ನ ಮನಸ್ಸು ಅವಳಿಗೆ
 ವಶವಾಯಿತೋ.. 

ಜನಗಳ ಸಂತೆ, ನೋಡುತ ನಿಂತೆ,
 ಅವಳದೇ ಚಿಂತೆ.. 
Bus ಹತ್ತಿ ಹೊರಟೇ ಹೋದಳು..
ನೋಡು ನೋಡುತಿದ್ದಂತೆ
ಮಾಯವಾದಳು..
ಒಂದು ಕ್ಷಣಕ್ಕೆ
 ಪ್ರೇಮವಾಯಿತೊ
ಇಲ್ಲ ದಿಗಿಲಾಯಿತೊ..
ತೋಚದಷ್ಟು ಚಿಂತೆ ಮನದಾಳದಲ್ಲಿ..
ನನ್ನ ಹೃದಯದ ಅಲಗೆಯಲಿ..
ಶುರುವಾಯಿತು ಒಲವಿನ ಕಾರುಬಾರು... 
ಹಣೆಕಟ್ಟಿಲ್ಲದೆ ಹರಿಯಿತು
ಪ್ರೀತಿಯ ನೀರು... 
ಈ ಮಾಯೆ ನಿಲ್ಲಲು
ಕುಡಿಯಬೇಕೆ ಬಿಯರು.? 
ಎಷ್ಟು ಕುಡಿದರು ಅವಳದೇ ನಶೆ..
 ನಮ್ಮಮ್ಮನಿಗೆ ಆಗಬಹುದೆ
ಸರಿಯಾದ ಸೊಸೆ.. 

ಅವಳ ವಿಳಾಸವ ಬಲ್ಲವರ್ಯಾರು.. ?
ಮತ್ತೊಮ್ಮೆ ಸಿಗಬಹುದೇ
ಭವಿಷ್ಯವನ್ನ ಅರಿತವರ್ಯಾರು. ?

ಗಣಿಯ ಸೌಂದರ್ಯದಾಕೃತಿಗೆ
ಪ್ರೇಮದ ಶಾವಿಗೆ ಅನ್ನ ಬಹುದೇ.?
ನಿಂತ ಚೆಲುವಿನಾಕೃತಿಗೆ
ಪ್ರೀತಿಯ ಬುಗ್ಗೆ ಮೂಡಬಹುದೇ.?

ಮತ್ತದೇ ಕ್ಷಣಕ್ಕೆ
 ಪ್ರೇಮವಾಯಿತೊ..
ಇಲ್ಲ ದಿಗಿಲಾಯಿತೊ...
ಭ್ರಮೆಗೊಂಡೆ, ಕಸಿವಿಸಿಗೊಂಡೆ..
ಭ್ರಮೆಯಲ್ಲಿ ಪ್ರೇಮಮುಗಿಯಿತು..
ಪ್ರೇಮದಲ್ಲಿ ಭ್ರಮೆ ಆರಂಭವಾಯಿತು..
ಅಷ್ಟರಲ್ಲಿ ನನ್ನ ಕವಿತೆಯೂ
                     ಮುಗಿಯಿತು...
                                      ಕಿರಣೋಕ್ತಿ....

Sunday, September 6, 2015

ಏನನ್ನಲೆ..

ಏನನ್ನಲೆ
ನಿನ್ನ ಏನನ್ನಲೆ...

ಭಾವದ ಕಾರಂಜಿಯಲಿ
ಹೊಮ್ಮಿ ಹರಿದವಳೆ..
ಜುಳು ಜುಳು ಅಲೆಯಲಿ
ರಸಜೀವ ತುಡಿದವಳೆ..

ತಿಳಿ ಆಗಸದಲಿ
ವಿಶಾಲತೆಯ ದೀರ್ಘತೆಯಲಿ
ಹಕ್ಕಿಯಂತೆ ಬಂದವಳೆ..
ವೇಣುವಿನಾದದ
ಅಣು ಅಣುವಿನಲಿ
ಶುಭ್ರತೆಯ ಭವ್ಯತೆಯಲಿ
ಪರಿಮಳವ ತಂದವಳೆ..

ಹದಿಹರೆಯದ
ಮನಸ್ಸಿನ ಮಾತಾಗಿ..
ಒಲವಿನ ಪ್ರಣಯದ
ಲತೆಯಾಗಿ..
ನನ್ನ ಮನದ
ಕಲ್ಪನೆಯಾಗಿ..
ಪದವಾಗಿ ಬಂದವಳೆ
ಬಂದು ನನ್ನಲ್ಲೆ ನಿಂತವಳೆ

ಏನನ್ನಲೆ ನಿನ್ನ ಏನನ್ನಲೆ,
ಹೆಣ್ಣೆನ್ನಲೆ..
ಅಥವಾ ಕವಿತೆಯೆನ್ನಲೆ..!!

                    ಕಿರಣ್ ಆತ್ರೇಯ್....

.......

ಗೆಳತಿ..,
ಇಪ್ಪತ್ತೈದು ಕಳೆದೇ
ಹೋಯಿತು.
ನನ್ನ ಅಸ್ತಿತ್ವವಕ್ಕೆ..
ನಿತ್ಯ ಬದುಕೇ
ಕನಸಾಯಿತು.
ಈಗಿನ ವರ್ತಮಾನಕ್ಕೆ..

ನಾಳೆಯ ನಿತ್ಯ ನೂತನಕ್ಕೆ
ಇಂದೇ ಬರೆಯಬೇಕು ಭಾಷ್ಯ...
ನಾವು ಅಂದುಕೊಂಡದ್ದು
ಆಗದಿರುವುದೇ ಮುಂದಿನ ಭವಿಷ್ಯ...

ಕಷ್ಟದ ನಂತರ
ಸುಖ ಸಾಮಾನ್ಯ..
ಗೆಲುವಿನ ನಂತರದ
ಸೋಲು ಅದಮ್ಯ. .

ಸಮುದ್ರ ಮಂಥನದಲ್ಲಿ
ವಾಸುಕಿಯ ನರಳಿನಾಕ್ರೋಷದಲ್ಲಿ.
ವಿಷವೇ ಆದದ್ದು ಅಮೃತ...
ಜೀವನ ಜಾತ್ರೆಯಲ್ಲಿ
ದೇಹನ ಮೆರವಣಿಗೆಯಲ್ಲಿ
ನಂಬಿಕೆಯೇ ಉಸಿರಾಗಬೇಕು
                 ಅನವರತ...

ಈ ಸುಖದುಃಖದಲಿ
ನನ್ನ ಅಸ್ತಿತ್ವವಕ್ಕೆ.
ನನ್ನ ಉದರ ನಿಮಿತ್ತಕ್ಕೆ..
ನಿತ್ಯ ಕರ್ಮಾನುಷ್ಟಾನವೊಂದೇ..
ಅದು ಶ್ರದ್ಧೆಯಲಿ, ಬದ್ಧತೆಯಲಿ,
ಇಲ್ಲ ನಿನ್ನ ಆಗಮನದ
                      ನಿರೀಕ್ಷೆಯಲಿ...
  
                       ಕಿರಣ್ ಆತ್ರೇಯ್....

Thursday, September 3, 2015

ವಿಪರ್ಯಾಸ

ಗೆಳತಿ....

ಆದ ಅನುಭವಗಳು
ಕಂಡ ಕನಸುಗಳು
ಹೃದಯಕ್ಕಪ್ಪಳಿಸುತ್ತದೆ.
ಪದೇ ಪದೇ ಮರುಕಳಿಸುತ್ತದೆ.
ಬಾವನಾತ್ಮಕತೆಗೆ ಒಡ್ಡುತ್ತದೆ.
ಮುಚ್ಚಿಡಲು ಆಗದೆ
ಬಚ್ಚಿಡಲು ಆಗದೆ
ಸೂಕ್ಷ್ಮಾನುಸೂಕ್ಷ್ಮವಾಗಿ
                    ಕಾಡುತ್ತದೆ.
ಬಗೆಬಗೆ ತರಕಾರಿಗಳಂತೆ
ಮನದ ಮಳಿಗೆಯ ತುಂಬ
ಕಂಡದ್ದು,  ಕೇಳಿದ್ದು,
ಎಲ್ಲವೂ ಬೀಡು ಬಿಟ್ಟಿದೆ....
ಮಿತವಾಗಿ ಗೂಡು ಕಟ್ಟಿದೆ...

        (ಎಂಥಾ ವಿಪರ್ಯಾಸ.)

Monday, August 31, 2015

ರಂಗವಲ್ಲಿ



ಗೆಳತಿ. .
  
  ರಂಗವಲ್ಲಿ ತುಂಬಿದ
  ನಿನ್ನ ಬೆರಳು ಹಿಡಿದು
  ಜೀವನದುದ್ದಕ್ಕೂ,
          ನಡೆಸಲೆ..

   ಚಿತ್ತದಲ್ಲಿ ತುಂಬಿದ,
        ನಿನ್ನ ಬಿಂಬದ
 ಮೂರ್ತಿಯನ್ನ ಸದಾ
ನನ್ನ ಹೃದಯದಲ್ಲಿಟ್ಟು
          ಆರಾಧಿಸಲೆ....

                                     ಕಕಿರಣ್ ಆತ್ರೇಯ್...

Monday, August 10, 2015

ನಿಶಾಚರ ಬದುಕು

 ಗೆಳತಿ!!!

ನಿಶಾಚರ ಬದುಕು                            
          ಸಾಕಾಗಿದೆ
ಭಾವಲಹರಿಯ ಸ್ಪಂದನ
         ಬೇಕೆನಿಸಿದೆ...

ಸರಿ ರಾತ್ರಿಯಲಿ
ನಭದ ಸೊಗಸೆ ಸುಂದರ
ತುಸು ಪ್ರೀತಿಯಲಿ
ನಿನ್ನ ನೆನೆಯುವ ಕಾತುರ...

ಜೋಂಪಿಡಿದ ಮನಸಿಗೆ
ತುಸು ತಲ್ಲಣ
ನಿದಿರೆ ಇಲ್ಲದ ಕನಸಿಗೆ
ನಿಶಯ ಅಮಲೇ ಉಲ್ಬಣ...

ಬದುಕು ಸವೆಯುತಿದೆ,
ಜೀವ ಹಿಂಡುತಿದೆ.
ನಾಲ್ಕು ಗೋಡೆಗಳ ಒಳಗೆ...
ಬುದ್ಧಿ ಮಂಕಾಗುತಿದೆ.
ಕಣ್ಣು ಮಿಟುಕುತಿದೆ.
ಚಷ್ಮದ ಒಳಗೆ...


ಬಹುರಾಷ್ಟ್ರದ ಗೆಳೆತನ
 ಕೆಲಸಕ್ಕಿಲ್ಲ ಕೊರತೆ
 ಬಹುಕೃತ ಖಾಸಗಿ ಒಡೆತನ
ದುಡಿಯುವುದೊಂದೆ ಒರತೆ...

ಆಗದಿರಲಿ ಜಾಗತಿಕ
ಆರ್ಥಿಕ ಅಪಸರಣ
ಕುಸಿಯದಿರಲಿ ಬದ್ಧತೆಯ
ಮನೆಮನದ ಆವರಣ...

 ಗೆಳತಿ
ಸಾಕಾಗಿದೆ ನಿಶಾಚರತೆ..
ಬೇಕಿದೆ ನಿನ್ನ ಪ್ರೀತಿಯ ಹಣತೆ...    





                               ಕಿರಣ್ ಆತ್ರೇಯ

Saturday, August 1, 2015

ಸ್ನೇಹ ಎಂದರೆ. ..

ಗೆಳತಿ. .

ಸ್ನೇಹದ ಕಲ್ಪನೆಯೇ ಹೀಗೆ.
ಅಭೂತಪೂರ್ವದ ಹಾಗೆ. .

ನಿಸ್ವಾರ್ಥದ
 ಪರಿಶುದ್ಧತೆಯಲ್ಲಿ..
 ಕಾಳಜಿಯ
 ಅಂತ:ಕರಣತೆಯಲ್ಲಿ..
ಸಾಗುವುದು ಇದರ ಯಾನ..
 ದಿಗಂತಕ್ಕೂ
 ಸೂರ್ಯ ಚಂದ್ರರ ತನಕ
 ಇದರ ಪ್ರ-ಯಾನ..

ಕರಗಲಾರದು
ಮುಗಿಯಲಾರದು
ಇದರ ಪಾರ...
ನೋವಿಗು
ನಲಿವಿಗು
ಇದುವೆ ಅಪಾರ...

ಎಲ್ಲ ಬಂದದ
ಬುಟ್ಟಿಯಲಿ ಅಡಗಿಹುದು
ಇದರ ಮಾಯೆ..
 ಎಲ್ಲ ಪ್ರೀತಿಯ
ಸಂಪ್ರೀತಿಯಲಿ ಉದುಗಿಹುದು
ಸ್ನೇಹದ ಛಾಯೆ..

 ಬಲ್ಲರು
ಎಲ್ಲರು
ಇದರ ಆಕಾರ..
ಜೀವನ
ಸಂಜೀವನ ಕಥೆಗೆ
ಇದರದೇ ಸಾಕಾರ..

ಗೆಳತಿ. .
ಸ್ನೇಹದ ಕಲ್ಪನೆಯೇ ಹೀಗೆ.
 ಅಭೂತಪೂರ್ವದ ಹಾಗೆ. .
 ಪ್ರೀತಿ, ನಿಸ್ವಾರ್ಥ,
ಪರಿಶುದ್ಧತೆ..
 ಇದುವೆ ನನ್ನ ಸ್ನೇಹದ
ಪ್ರಖರತೆ..                           
                               

                    ಕಿರಣ್ ಆತ್ರೇಯ
 


Tuesday, July 21, 2015

ವ್ಯಥೆ...



ಬೀಳು ಬಿಟ್ಟಿದೆ
ಮನಸಿನ ತುಂಬ 75ರ 
 ಹರೆಯದ ಅಸಿ ನಿದ್ದೆ. ....
 
ಒಣಕಲು ಮರದ   
ರೆಂಬೆಯ ತುದಿಯಲಿ
 ಬಣ್ಣ ಬಣ್ಣದ ದಾರವ ಕಟ್ಟಿ  
 ಪ್ರಶ್ನೆಗಳಿಲ್ಲದ
ಉತ್ತರದಾಳೆಯ ಹಾರವ,
ನೇಣಿಗೆ ಹಾಕಿ..
ಭೂತದ ಕನಸನ್ನ ತಟ್ಟಿ
ತಪ್ತ ಬದುಕಿನ ಕಂದಕವ
 - ಕುಣಿಕೆಗೆ ಹಾಕಿ
ಕುಟ್ಟುತಿದ್ದಾಳೆ - ಮುದುಕಿ 
ಹರಿದ ಭಾವನೆಯ ತುದಿ ಇಡಿದು    
ನಿರರ್ಥಕ ಕಲ್ಪನೆಯ ಸಾಲನ್ನು ನೆನೆದು 
ಕೃಷ್ಣ, ಗೋವಿಂದ ಎಂದು
ಪಟಪಟ ಜಪಿಸುತ್ತಿದ್ದಾಳೆ  
ಸುಪ್ತ ಪ್ರಪಂಚದ ಅಮಾನವೀಯತೆಗೆ.. 
ಸರ್ವಸ್ವಾತಂತ್ರದ ಪಾರಮಾರ್ಥಕತೆಗೆ..
ಜೀವನದುದ್ದಕ್ಕು ಉಂಡ
ಗೊಂದಲದ ಖಾರ್ಮೋಡಗಳ                
                 -  ವ್ಯಥೆಗೆ....          
     
                           ಕಿರಣ್ ಆತ್ರೇಯ





















Sunday, July 19, 2015

ನಿನ್ನದೆ ನೆನಪಲ್ಲಿ

ನಿನ್ನದೆ ನೆನಪಲ್ಲಿ...

 ಒಂದು ಕ್ಷಣ ಮೌನಿಯಂತೆ
 ಕೂರಲು ನನ್ನ ಹಾರ್ಟ್
ಬಿಡುವುದೆ ಇಲ್ಲ....
ಪ್ರತಿ ಬಾರಿಯು
ಗಡಿಯಾರದ ಸೆಕೆಂಡ್
ಮುಳ್ಳಿನಂತೆ ಬಾರಿಸುತ್ತದೆ...
ನಿಮಿಷಕ್ಕೆ ಅದೆಷ್ಟು ಬಾರಿಯೋ...
ಪ್ರತಿ ಬಾರಿಯು
ನಿನ್ನ ಹೆಸರೇ ನುಡಿಸುತ್ತಿರುತ್ತದೆ...
ರಾಕೆಟ್ ಗಿಂತ ವೇಗವಾಗಿ
ಚಲಿಸುವ ರಕ್ತ ಕಣಗಳು
ನಿನ್ನ ಬಿಂಬವನ್ನೇ ರವಾನಿಸುತ್ತದೆ....
ನನ್ನ ಕಣ್ಣ ಮುಂದೆ ನಿನೇ ಇದ್ದಂತೆ....
ರೈಲು ಚೆಲಿಸುವಂತೆ
ನನ್ನ ಮೆದುಳು
ನಿನ್ನದೆ ನೆನಪಲ್ಲಿ ಓಡುತ್ತಿದೆ....

ಆದರೂ ಒಂದು ಕ್ಷಣ
 ಮೌನಿಯಂತೆ ಕೂರಲು
ಪ್ರಯತ್ನಿಸುತ್ತಿರುವೆ

ನಿನ್ನದೆ ನೆನಪಲ್ಲಿ...
ನಿನ್ನದೆ ಸದ್ದಿನಲ್ಲಿ...         

                           ಕಿರಣ್ ಆತ್ರೇಯ್

Wednesday, July 15, 2015

ನಾನೇ ಮರೆಯುವ ತನಕ..


ಗೆಳತಿ..

ನಿನ್ನ
ಮರೆಯಲೆಂದು ಹೊರಟೆ..
ಒಲ್ಲದ ಮನಸ್ಸಿನಿಂದ..
 ಹೃದಯವನ್ನು ಕಲ್ಲು ಮಾಡಿದೆ..
 ಪ್ರೀತಿಯನ್ನು ಗಂಟು ಕಟ್ಟಿದೆ..
 ಬಾವನೆಗಳ ಕುಟ್ಟಿ ಪುಡಿಮಾಡಿದೆ..
ನಿನ್ನ ನೆನಪ ನನ್ನ
ರಕ್ತದಲ್ಲಿ ಅಡಗಿಸಿದೆ..
ನನ್ನ ದಾರಿಯಲ್ಲಿ
 ನಿನ್ನ ನೆನಪು ಬಾರದಂತೆ..
ಆದರೂ ಮರೆಯುತ್ತೇನೆ
 ನಿನ್ನ ನೆಪದ ಛಾಯೆಯಲಿ.

ನನ್ನ ಅಸ್ತಿತ್ವವನ್ನ
 ನಾನೇ ಮರೆಯುವ ತನಕ..   
                               ಕಿರಣ್ ಆತ್ರೇಯ

Tuesday, July 14, 2015

ಗೆಳತಿ. ..


ಗೆಳತಿ. ..

ಅಪಾರದರ್ಶಕ ವಾದ   
ಈ ಪ್ರಪಂಚದಲ್ಲಿ,
ಮುಗ್ಧತೆಯನ್ನ ಹುಡುಕುವುದು
ಬಲು ಕಷ್ಟ. ..

 ಸತ್ಯ ಕೆಲವೊಮ್ಮೆ
 ಸುಳ್ಳಾಗುತ್ತದೆ..
 ಸುಳ್ಳು ಕೆಲವೊಮ್ಮೆ
ಸತ್ಯ ದಂತೆ ಕಾಣುತ್ತದೆ. .

 ಈ ಸತ್ಯಾಸತ್ಯದ
 ಅನ್ವೇಷಣೆಯಲಿ,
 ನಿನ್ನ ಮುಗ್ಧ ಪ್ರೀತಿಯನ್ನು
ಹುಡುಕುವ ಸನ್ಯಾಸಿಯಂತಾಗಿದೆ
 ನನ್ನ ಬದುಕು.....                                      
                             ಕಿರಣ್ ಆತ್ರೇಯ. ..







Saturday, June 20, 2015

ಕವಿಯಾದೆನು


ನೋಡಿ ನಿನ್ನ ಕವಿಯಾದೆನು 
ಕಲೆಯ ರಸದ ಭಲೆಯಲಿ ಸೆರೆಯಾದೆನು......

ಹೂವಿನಂತೆ ನಾಚಿ ನಿನ್ನ ಅದರವು  
ದುಂಬಿಯಂತೆ ಕರೆಯುತಿದೆ ನನ್ನ ಭಾವವು....

 ಕೋಗಿಲೆಯ ದನಿ ನಿನ್ನ ರಿಂಗಣ ಕಂಠವು   
ಸಪ್ತ ರಸದಲಿ ಹಾಡುತಿದೆ ನನ್ನ ತನುವು....

ರೇಷಿಮೆಯ ಕಾಂತಿ ನಿನ್ನ ಹೊಳಪು ಕೇಶವು
 ಬಾವ ತರಂಗದಿ ಕಂಪಿಸಿದೆ ನನ್ನ ಮನವು.... 

ಮೀನ ದೇಹದಾಟವು ನಿನ್ನ ಚಂಚಲ ನಯನವು   
 ಕಪ್ಪೆಚಿಪ್ಪ ಮುತ್ತಂತೆ ಅರಳಿದೆ ನನ್ನ ಮಧುರ ಪ್ರೇಮವು....  

 ನೋಡಿ ನಿನ್ನ ಕವಿಯಾದೆನು
 ಕಲೆಯ ರಸದ ಭಲೆಯಲಿ ಸೆರೆಯಾದೆನು. .....                         
 
                                                  ಕಿರಣ್ ಆತ್ರೇಯ....













Wednesday, June 17, 2015

ಇಲ್ಲದಂತಾಗಿದೆ...

ಗೆಳತಿ. ..


ಇಂದೇಕೋ ಮನಸ್ಸು
ಭಗ್ನವಾದಂತ  
ಅವಶೇಷವು ಇಲ್ಲದಂತ   
 ಪ್ರೇಮಿಯಂತಾಗಿದೆ.....

ಕನಸುಗಳ ಹುಂಬಿಲ್ಲದೆ
  ಆಮಿಷ ಗಳ  ತ್ತ್ಯಾಜ್ಯ ಪರಿಕರವಿಲ್ಲದೆ 
 ಏಕಾಂಗಿಯಂತಾಗಿದೆ
 ನಿನ್ನ ನೆನಪಲ್ಲಿ..

ಕಂಡರು ನಿನ್ನ ಕಾಣದಂತೆ,
ನಟಿಸುವ ಹುಂಬತನ....
ಆಲಿಸಿದರೆ ನಿನ್ನ ದನಿಯಂತೆ,
  ಮಾತನಾಡಿಸದ ಜಂಬತನ..

 ಸ್ನೇಹದ ಪರಿಧಿಯ ಮೀರಿದರೆ
ಪ್ರೇಮದ ಅಪರಿಮಿತೆ ಕಾಡುತ್ತದೆ. .
 ಸ್ನೇಹಕ್ಕೋ ಆಯ ತಪ್ಪಿ
   ಪ್ರೇಮ ನಿರ್ಜೀವ ವಾಗುತ್ತದೆ.. 
 ಯೋಚಿಸಿದರೆ ನನ್ನ ಮನಸ್ಸು
 ತೀವ್ರ ತರ್ಕಕ್ಕೆ ಒಡ್ಡತ್ತದೆ.. 

ಸ್ನೇಹದ ಛಾಯೆ ಸಾಕಲ್ಲವೇ
  ನಿನ್ನ ಪ್ರೀತಿಸಲಿಕ್ಕೆ...
ಎಂತಾದರು ಸಾಧ್ಯವೇ
 ನಿನ್ನ ಮರೆಯಲಿಕ್ಕೆ.....

ಗೆಳತಿ 
ಇಂದೇಕೋ ಮನಸ್ಸು
 ಭಗ್ನವಾದಂತಾಗಿದೆ..
 ನನ್ನ ಅವ ಶೇಷವು  
ಇಲ್ಲದಂತಾಗಿದೆ....  

                          ಕಿರಣ್ ಆತ್ರೇಯ್. ...































































Sunday, June 14, 2015

ಕನಸು. ..

ಕನಸು. ..

ನನ್ನ ಸ್ಮೃತಿಗೆ
ನೆನಪಾಗಲಾರದ
ಮರೆಯಲೂ ಆಗದ
ಗೆಳತನದ ಅನುಭವ
ಬಂದು ಕೊನೆಗೆ ಅರ್ಥವೂ ಆಗದ
 ಧರ್ಮ ಸಂಕಟವುಂಟಾಗಿ
ಸ್ವಲ್ಪ ಜಂಭ ಬಂದು
ಗೆಳತನದ ನೆನಪೇ ಇಲ್ಲದಂಥಾಯಿತು.                                                       ಕಿರಣ್ ಆತ್ರೇಯ್. ..





ಮನೆಗೆ ಬಾರಲಿಲ್ಲವಲ್ಲಾ ಕೃಷ್ಣ....



ಮನೆಗೆ ಬಾರಲಿಲ್ಲವಲ್ಲಾ ಇಷ್ಟೊತ್ತಾದರು ನನ್ನ ಪುಟ್ಟ ಕೃಷ್ಣ
ಸಂಜೆ ಕತ್ತಲು ಕವಿಯುತಿಹುದು ಜಗಕೆ ನೆರಳು ಹಾಸುತಿಹುದು
ಹೇಳೆ ಗೋಪಿ ಎಲ್ಲಿ ಹೋದನೆ ? ಏನು ಮಾಡುತಿಹನೆ ? ಮನೆಗೆ ಬಾರಲಿಲ್ಲವಲ್ಲ ನನ್ನ ಮುದ್ದು ಕೃಷ್ಣ ||

ಧನಕರುಗಳ ಸಾಲು ಹಿಂತಿರುಗಿ ಬರುತಿದೆ
ಹಕ್ಕಿಗಳ ಸಾಲು ಮೆಲ್ಲನೆ ಗೂಡು ಸೇರುತಿದೆ
ಗೋಧೂಳಿಯ ಕಣ ಮೇಲಕೆ ಹಾರಿ
 ಶುಭ ಸಂಜೆಗೆ ಪತ್ರವ ಬರಿಯುತಿದೆ ||

 ತನ್ನ ಗೆಳೆಯರೊಡನೆ ಕೂಡಿ ಯಾರ
 ಮನೆಗೆ ಹೋಗಿಹನೇ ಬೆಣ್ಣೆಯನ್ನ ಕದಿಯಲು
 ತನ್ನ ಕರುಗಳೊಡನೆ ಆಡಿ ಯಾವ
ಸ್ಠಳದಿ ಕುಳಿತಿಹನೇ ಕೊಳಲನ್ನ ನುಡಿಸಲು

ಹೇಳೆ ಗೋಪಿ ಎಲ್ಲಿ ಹೋದನೆ ? ಏನು ಮಾಡುತಿಹನೆ ?
ಮನೆಗೆ ಬಾರಲಿಲ್ಲವಲ್ಲ ನನ್ನ ಮುದ್ದು ಕೃಷ್ಣ||      

ಕಿರಣ್ ಆತ್ರೇಯ್...















ಕವಿತೆ. .

ಕವಿತೆ. ..

 ಹೇ ಕವಿತೆ
ತೊರೆಯದಿರು
 ಈ ಕವಿ ಯ.. 
ಮರೆಯದಿರು
 ಈ ಮುನಿ ಯ..

ರಸ ದೀವಿಗೆ
ತುಂಬುವುದು ಜಗವ..
ನಿನ್ನ ಸ್ನೇಹ
ಬೆಳಗುವುದು ಮನವ..

ಇರಲಿ ಶಾರದೆಯ
ಸಾನಿಧ್ಯ.
ನನ್ನ ತನುವೆ
ನಿನಗೆ ನೈವೇದ್ಯ. .

ನೀನು ಕೈ ಹಿಡಿದರೆ
ತಾಳುವುದು ಈ ಜೀವ. .
ನೀನು ಕೈ ಬಿಟ್ಟರೆ
ಸಾಯುವುದು ಕವಿಯ ಜೀವ.               
                        
                        ಕಿರಣ್ ಆತ್ರೇಯ. ..